ಬೆಂಗಳೂರು: 24 ಗಂಟೆಯೊಳಗೆ ನಾನು ಬೆಂಗಳೂರಿಗೆ ವಾಪಸ್ ಬರಲು ಸಿದ್ಧ. ಆದರೆ ಬೆಂಗಳೂರು ಪೊಲೀಸರು ನನ್ನನ್ನು ರಕ್ಷಿಸುತ್ತಾರಾ? ಎಂದು ಜನರಿಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ್ ಮಹಮ್ಮದ್ ಮನ್ಸೂರ್ ಅಲಿಖಾನ್ ಹೇಳಿದ್ದಾರೆ.
ವಿಡಿಯೋ ಬಿಡುಗಡೆ ಮಾಡಿ ತಲೆಮರೆಸಿಕೊಂಡಿರುವ ಮನ್ಸೂರ್ ಖಾನ್ ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ವಾಪಸ್ಸಾಗುವ ಭರವಸೆ ನೀಡಿದ್ದಾರೆ. ಜತೆಗೆ ಎಲ್ಲರ ಹಣ ವಾಪಸ್ ನೀಡುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ನಾನು 24 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಬರಲು ಸಿದ್ಧ. ಆದರೆ ಪೊಲೀಸರು ನನಗೆ ಸಂಪೂರ್ಣ ರಕ್ಷಣೆ ನೀಡುವ ಭರವಸೆ ನೀಡುತ್ತಾರಾ ಎಂದು ಮನ್ಸೂರ್ ಖಾನ್ ಪ್ರಶ್ನಿಸಿದ್ದಾರೆ.
ನಾನು ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು, ಬೆಡ್ ರೆಸ್ಟ್ ನಲ್ಲಿದ್ದೇನೆ. ಡಯಾಬಿಟಿಸ್ ಹಾಗೂ ಕೆಲ ಆರೋಗ್ಯದ ಸಮಸ್ಯೆಯಿಂದ ಬೆಡ್ ರಸ್ಟ್ ನಲ್ಲಿ ನಾನು ಇರಬೇಕಾಯಿತು ಎಂದಿರುವ ಮನ್ಸೂರ್ ಖಾನ್, ಈ ಕಾರಣದಿಂದಲೇ ಗ್ರಾಹಕರಿಗೆ ಹಣ ವಾಪಸ್ ಮಾಡಲು ಸಮಯವಾಗುತ್ತಿದೆ ಎಂದಿದ್ದಾರೆ.
ಮೊದಲನೆಯದಾಗಿ ನಾನು ಭಾರತ ಬಿಟ್ಟು ಹೋಗಿದ್ದು ದೊಡ್ಡ ತಪ್ಪು. ರಾಜಕಾರಣಿಗಳ ಒತ್ತಡದಿಂದ ನಾನು ಭಾರತವನ್ನ ಬಿಡಬೇಕಾಯಿತು. ಈಗಲೂ ನನಗೆ ನನ್ನ ಕುಟುಂಬ ಎಲ್ಲಿದೆ ಎಂಬುದು ಗೊತ್ತಿಲ್ಲ, ಹೇಗಿದ್ದಾರೆ ಗೊತ್ತಿಲ್ಲ. ಅವರ ಬಳಿ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.